"ಯೋಧ"
"ಖಾಲಾ..., ನಿಮ್ ಕೈಲಿ ಆಗ್ದಿದ್ರೆ ಇಲ್ಲೇ ಇಟ್ಬಿಡಿ...ನಾನೇ ಮನೆಗೆ ತರ್ತೇನೆ...", ಅಬೀದಾ ಚಿಕ್ಕಮ್ಮ ಹಫೀಜಾಳಿಗೆ ಹೇಳಿದಳು. "ಹೌದು, ತುಂಬಾ ಸುಸ್ತಾಗ್ತಿದೆ...ಇಲ್ಲೇ ಇಡ್ತೀನಿ...ನಾನಿಲ್ಲೇ ಸ್ವಲ್ಪ ಹೊತ್ತು ಮರದ ಕೆಳಗೆ ಕೂತಿರ್ತೇನೆ...ನೀನು ಮನೆಗೆ ಹೋಗಿ ನಿನ್ನ ಹೊರೆಯನ್ನು ಇಳಿಸಿ ಬಾ...ಹಾಗೆ ಬರ್ತಾ ಬಿಸಿ ಬಿಸಿ ಖಾಹ್ವಾ ತಕ್ಕೊಂಡು ಬಾ...ಗಂಟಲು ಕಟ್ಟಿದೆ...", ಹಫೀಜಾ ಅಲ್ಲೇ ಇದ್ದ ಮರದ ಬುಡಕ್ಕೆ ಒರಗಿ ಕುಳಿತು "ಅಲ್ಲಾ...", ಎಂದು ನಿಟ್ಟುಸಿರು ಬಿಟ್ಟಳು.
ಪಹೆಲ್ಗಾಮ್ ...ನಿಸರ್ಗದ ಚೆಲುವನ್ನೆಲ್ಲಾ ಬಾಚಿ ಹೊದ್ದುಕೊಂಡು ಕಾಶ್ಮೀರದಲ್ಲಿ ಮೈಚೆಲ್ಲಿರುವ ಪ್ರದೇಶ. ಎಲ್ಲಿ ನೋಡಿದರೂ ಹಚ್ಚ ಹಸಿರು. ಜೂನ್ ತಿಂಗಳ ಆ ಪರಿಸರದಲ್ಲಿ ಸ್ವರ್ಗದ ತುಣುಕು ಅಲ್ಲೇ ಬಿದ್ದಿದೆ ಎಂಬಂಥ ಪ್ರಕೃತಿ. ಕಣ್ಣ ದೃಷ್ಟಿ ಹಾಯುವವರೆಗೂ ಹಸಿರು ಹೊದಿಕೆಯನ್ನು ಹೊದ್ದ ನೆಲ...ದಾರಿಯುದ್ದಕ್ಕೂ ವೃಕ್ಷಸಿರಿ...ಹಕ್ಕಿಗಳ ನಿನಾದ...ಬೆಳಗಿನ ಚುಮುಚುಮು ಚಳಿಯಲ್ಲಿ ಅಬೀದಾ ತನ್ನ ಚಿಕ್ಕಮ್ಮ ಹಫೀಜಾಳ ಜೊತೆ ಕಟ್ಟಿಗೆ ತುಂಡುಗಳನ್ನು ತರಲು ಹೋಗಿದ್ದಳು. ಆಗಲೇ ಹಫೀಜಾಗೆ ಸುಸ್ತಾಗಿದ್ದು!
ಭೂಲೋಕದ ಸ್ವರ್ಗವಾದ ಕಾಶ್ಮೀರಕ್ಕೆ ಅಸಂಖ್ಯ ಪ್ರವಾಸಿಗರು ಬಂದು ಹೋಗುತ್ತಲೇ ಇರುತ್ತಾರೆ. ನಿಸರ್ಗಮಾತೆಯ ತುಂಬು ಯೌವನದ ಚೆಲುವನ್ನು ಕಣ್ತುಂಬಾ ತುಂಬಿಕೊಂಡು, ಜೀವನ ಪೂರ್ತಿ ಮರೆಯಲಾಗದ ಸ್ವರ್ಗ ನೋಟವನ್ನು ಹೃದಯದಲ್ಲಿಟ್ಟುಕೊಂಡು ವಾಪಸ್ಸು ತಮ್ಮ ಊರಿಗೆ ಹಿಂದಿರುಗುತ್ತಾರೆ. ಕಾಶ್ಮೀರದಲ್ಲೇ ವಾಸಿಸುವವರನ್ನು ಅದೃಷ್ಟವಂತರೆಂದು ಭಾವಿಸುತ್ತಾರೆ. ಅದು ನಿಜವೂ ಕೂಡ...ಕಾಶ್ಮೀರಿ ಜನರನ್ನು ನೋಡಿದಾಗ ಹಾಗೆಯೇ ಅನ್ನಿಸುತ್ತದೆ. ಅವರ ಕಾಯ, ಹಾಲಿನ ಮೈಬಣ್ಣ, ತಿದ್ದಿತೀಡಿದ ಅಂಗಾಂಗಗಳನ್ನು ನೋಡಿದಾಗ "ದೇವರು, ಇಲ್ಲಿ ಪ್ರಕೃತಿ ಸಿರಿಯನ್ನಷ್ಟೇ ಕೊಟ್ಟಿಲ್ಲ...ಇಲ್ಲಿರುವ ಜನರಿಗೂ ರಮ್ಯ ರೂಪ ಕೊಟ್ಟಿದ್ದಾನಲ್ಲಾ ", ಎಂಬ ಅಸೂಯೆಯೂ ಆಗುತ್ತದೆ. ಆದರೆ ಆ ಕಾಶ್ಮೀರಿ ಜನರ ನಿತ್ಯ ಜೀವನವನ್ನು ಕೇಳಿದಾಗ ಬೇರೆ ಪ್ರದೇಶಗಳಲ್ಲಿರುವವರ ಮನಸ್ಸು ಕರಗುವುದು ಖಂಡಿತ. ಚೆಂದುಳ್ಳಿ ಚೆಲುವೆಯರಾದ ಕಾಶ್ಮೀರಿ ಮಹಿಳೆಯರು ದಿನಾ ಬೆಳಿಗ್ಗೆ ಎದ್ದು ಕಾಡಿಗೆ ಹೋಗಿ ಕಟ್ಟಿಗೆ ತುಂಡುಗಳನ್ನು ಆರಿಸಿ, ಹೊರೆ ಕಟ್ಟಿಕೊಂಡು, ತಲೆಯ ಮೇಲಿಟ್ಟುಕೊಂಡು ಮನೆಗೆ ಬರಬೇಕು. ಮನೆಯ ಮುಂದಿನ ಪಡಸಾಲೆಯಲ್ಲಿ ಕಟ್ಟಿಗೆ ಇಡುವುದಕ್ಕೆಂದೇ ಒಂದು ಜಾಗ ಮಾಡಿರುತ್ತಾರೆ. ಅಲ್ಲಿ ಸಂಗ್ರಹ ಮಾಡುತ್ತಾ ಹೋಗಬೇಕು. ಅದು ಅಲ್ಲಿನ ಮಹಿಳೆಯರು ಚಾಚೂ ತಪ್ಪದೆ ಮಾಡುವಂತಹ ನಿತ್ಯ ಕಾಯಕ. ಏಕೆಂದರೆ ವರ್ಷದಲ್ಲಿ ಕೇವಲ ಆರೇಳು ತಿಂಗಳಷ್ಟೇ ಅವರು ಹೊರಗೆ ಓಡಾಡಬಹುದು. ಆಮೇಲೆ ಇನ್ನಾರು ತಿಂಗಳು ಮಂಜುಮುಸುಕಿ, ಇಡೀ ಪ್ರದೇಶ ಹಿಮದಿಂದ ಮುಚ್ಚಿಕೊಂಡುಬಿಡುತ್ತದೆ. ಆಗ ಯಾರೂ ಮನೆಯಿಂದ ಹೊರಗೆ ಹೆಜ್ಜೆಯಿಡುವುದಕ್ಕೂ ಸಾಧ್ಯವಿಲ್ಲ. ಆರು ತಿಂಗಳಿಗಾಗುವಷ್ಟು ಸಂಗ್ರಹಿಸಿದ್ದ ದವಸ-ಧಾನ್ಯಗಳಲ್ಲೇ ಜೀವನ ನಡೆಸಬೇಕು. ಕಾಡಿಗೆ ಹೋಗಿ ತಂದು ಶೇಖರಿಸಿದ್ದ ಕಟ್ಟಿಗೆಯನ್ನು ಉರಿಸಿ ಅಡುಗೆ ಮಾಡಿಕೊಳ್ಳಬೇಕು. ಹಾಗಾಗಿ ಅಲ್ಲಿನ ಮಹಿಳೆಯರು ದಿನವೂ ಕಟ್ಟಿಗೆ ತರಲು ಹೋಗಲೇಬೇಕು. ಗಂಡಸರು ಟ್ಯಾಕ್ಸಿ ಓಡಿಸುತ್ತಲೋ, ವ್ಯಾಪಾರ ಮಾಡುತ್ತಲೋ ಹಣ ಸಂಗ್ರಹ ಮಾಡುತ್ತಾರೆ. ಹಿಮ ಮುಸುಕಿದಾಗ ಅವರೂ ಸಹ ಮನೆಯೊಳಗೆ ಬಂಧಿಗಳಾಗಬೇಕು....ಅಷ್ಟೇ ಅವರ ಜೀವನ...ಅಲ್ಲಿ ಇನ್ನಾವುದೇ ರೋಚಕತೆಯಿಲ್ಲ, ಮನರಂಜನೆಯಿಲ್ಲ...ಅರ್ಧ ವರ್ಷ ಬಂಧನದ ಜೀವನ...ಇನ್ನರ್ಧ ವರ್ಷ ದುಡಿಮೆ...ಇದುವೇ ಆ ಸ್ವರ್ಗವಾಸಿಗಳ ಜೀವನ ರಾಗ.
ಪಹೆಲ್ಗಾಮ್ ...ನಿಸರ್ಗದ ಚೆಲುವನ್ನೆಲ್ಲಾ ಬಾಚಿ ಹೊದ್ದುಕೊಂಡು ಕಾಶ್ಮೀರದಲ್ಲಿ ಮೈಚೆಲ್ಲಿರುವ ಪ್ರದೇಶ. ಎಲ್ಲಿ ನೋಡಿದರೂ ಹಚ್ಚ ಹಸಿರು. ಜೂನ್ ತಿಂಗಳ ಆ ಪರಿಸರದಲ್ಲಿ ಸ್ವರ್ಗದ ತುಣುಕು ಅಲ್ಲೇ ಬಿದ್ದಿದೆ ಎಂಬಂಥ ಪ್ರಕೃತಿ. ಕಣ್ಣ ದೃಷ್ಟಿ ಹಾಯುವವರೆಗೂ ಹಸಿರು ಹೊದಿಕೆಯನ್ನು ಹೊದ್ದ ನೆಲ...ದಾರಿಯುದ್ದಕ್ಕೂ ವೃಕ್ಷಸಿರಿ...ಹಕ್ಕಿಗಳ ನಿನಾದ...ಬೆಳಗಿನ ಚುಮುಚುಮು ಚಳಿಯಲ್ಲಿ ಅಬೀದಾ ತನ್ನ ಚಿಕ್ಕಮ್ಮ ಹಫೀಜಾಳ ಜೊತೆ ಕಟ್ಟಿಗೆ ತುಂಡುಗಳನ್ನು ತರಲು ಹೋಗಿದ್ದಳು. ಆಗಲೇ ಹಫೀಜಾಗೆ ಸುಸ್ತಾಗಿದ್ದು!
ಭೂಲೋಕದ ಸ್ವರ್ಗವಾದ ಕಾಶ್ಮೀರಕ್ಕೆ ಅಸಂಖ್ಯ ಪ್ರವಾಸಿಗರು ಬಂದು ಹೋಗುತ್ತಲೇ ಇರುತ್ತಾರೆ. ನಿಸರ್ಗಮಾತೆಯ ತುಂಬು ಯೌವನದ ಚೆಲುವನ್ನು ಕಣ್ತುಂಬಾ ತುಂಬಿಕೊಂಡು, ಜೀವನ ಪೂರ್ತಿ ಮರೆಯಲಾಗದ ಸ್ವರ್ಗ ನೋಟವನ್ನು ಹೃದಯದಲ್ಲಿಟ್ಟುಕೊಂಡು ವಾಪಸ್ಸು ತಮ್ಮ ಊರಿಗೆ ಹಿಂದಿರುಗುತ್ತಾರೆ. ಕಾಶ್ಮೀರದಲ್ಲೇ ವಾಸಿಸುವವರನ್ನು ಅದೃಷ್ಟವಂತರೆಂದು ಭಾವಿಸುತ್ತಾರೆ. ಅದು ನಿಜವೂ ಕೂಡ...ಕಾಶ್ಮೀರಿ ಜನರನ್ನು ನೋಡಿದಾಗ ಹಾಗೆಯೇ ಅನ್ನಿಸುತ್ತದೆ. ಅವರ ಕಾಯ, ಹಾಲಿನ ಮೈಬಣ್ಣ, ತಿದ್ದಿತೀಡಿದ ಅಂಗಾಂಗಗಳನ್ನು ನೋಡಿದಾಗ "ದೇವರು, ಇಲ್ಲಿ ಪ್ರಕೃತಿ ಸಿರಿಯನ್ನಷ್ಟೇ ಕೊಟ್ಟಿಲ್ಲ...ಇಲ್ಲಿರುವ ಜನರಿಗೂ ರಮ್ಯ ರೂಪ ಕೊಟ್ಟಿದ್ದಾನಲ್ಲಾ ", ಎಂಬ ಅಸೂಯೆಯೂ ಆಗುತ್ತದೆ. ಆದರೆ ಆ ಕಾಶ್ಮೀರಿ ಜನರ ನಿತ್ಯ ಜೀವನವನ್ನು ಕೇಳಿದಾಗ ಬೇರೆ ಪ್ರದೇಶಗಳಲ್ಲಿರುವವರ ಮನಸ್ಸು ಕರಗುವುದು ಖಂಡಿತ. ಚೆಂದುಳ್ಳಿ ಚೆಲುವೆಯರಾದ ಕಾಶ್ಮೀರಿ ಮಹಿಳೆಯರು ದಿನಾ ಬೆಳಿಗ್ಗೆ ಎದ್ದು ಕಾಡಿಗೆ ಹೋಗಿ ಕಟ್ಟಿಗೆ ತುಂಡುಗಳನ್ನು ಆರಿಸಿ, ಹೊರೆ ಕಟ್ಟಿಕೊಂಡು, ತಲೆಯ ಮೇಲಿಟ್ಟುಕೊಂಡು ಮನೆಗೆ ಬರಬೇಕು. ಮನೆಯ ಮುಂದಿನ ಪಡಸಾಲೆಯಲ್ಲಿ ಕಟ್ಟಿಗೆ ಇಡುವುದಕ್ಕೆಂದೇ ಒಂದು ಜಾಗ ಮಾಡಿರುತ್ತಾರೆ. ಅಲ್ಲಿ ಸಂಗ್ರಹ ಮಾಡುತ್ತಾ ಹೋಗಬೇಕು. ಅದು ಅಲ್ಲಿನ ಮಹಿಳೆಯರು ಚಾಚೂ ತಪ್ಪದೆ ಮಾಡುವಂತಹ ನಿತ್ಯ ಕಾಯಕ. ಏಕೆಂದರೆ ವರ್ಷದಲ್ಲಿ ಕೇವಲ ಆರೇಳು ತಿಂಗಳಷ್ಟೇ ಅವರು ಹೊರಗೆ ಓಡಾಡಬಹುದು. ಆಮೇಲೆ ಇನ್ನಾರು ತಿಂಗಳು ಮಂಜುಮುಸುಕಿ, ಇಡೀ ಪ್ರದೇಶ ಹಿಮದಿಂದ ಮುಚ್ಚಿಕೊಂಡುಬಿಡುತ್ತದೆ. ಆಗ ಯಾರೂ ಮನೆಯಿಂದ ಹೊರಗೆ ಹೆಜ್ಜೆಯಿಡುವುದಕ್ಕೂ ಸಾಧ್ಯವಿಲ್ಲ. ಆರು ತಿಂಗಳಿಗಾಗುವಷ್ಟು ಸಂಗ್ರಹಿಸಿದ್ದ ದವಸ-ಧಾನ್ಯಗಳಲ್ಲೇ ಜೀವನ ನಡೆಸಬೇಕು. ಕಾಡಿಗೆ ಹೋಗಿ ತಂದು ಶೇಖರಿಸಿದ್ದ ಕಟ್ಟಿಗೆಯನ್ನು ಉರಿಸಿ ಅಡುಗೆ ಮಾಡಿಕೊಳ್ಳಬೇಕು. ಹಾಗಾಗಿ ಅಲ್ಲಿನ ಮಹಿಳೆಯರು ದಿನವೂ ಕಟ್ಟಿಗೆ ತರಲು ಹೋಗಲೇಬೇಕು. ಗಂಡಸರು ಟ್ಯಾಕ್ಸಿ ಓಡಿಸುತ್ತಲೋ, ವ್ಯಾಪಾರ ಮಾಡುತ್ತಲೋ ಹಣ ಸಂಗ್ರಹ ಮಾಡುತ್ತಾರೆ. ಹಿಮ ಮುಸುಕಿದಾಗ ಅವರೂ ಸಹ ಮನೆಯೊಳಗೆ ಬಂಧಿಗಳಾಗಬೇಕು....ಅಷ್ಟೇ ಅವರ ಜೀವನ...ಅಲ್ಲಿ ಇನ್ನಾವುದೇ ರೋಚಕತೆಯಿಲ್ಲ, ಮನರಂಜನೆಯಿಲ್ಲ...ಅರ್ಧ ವರ್ಷ ಬಂಧನದ ಜೀವನ...ಇನ್ನರ್ಧ ವರ್ಷ ದುಡಿಮೆ...ಇದುವೇ ಆ ಸ್ವರ್ಗವಾಸಿಗಳ ಜೀವನ ರಾಗ.
ಅಬೀದಾ ಸುಂದರಿಯರಲ್ಲಿ ಸುಂದರಿ. ಹಾಲ್ಬಿಳಿಪಿನ ಮೈಬಣ್ಣಕ್ಕೆ ನೀಳ ಮೂಗು, ಬೊಗಸೆ ಕಂಗಳು, ಕೆನ್ನೆ ಮೇಲಿನ ಗುಳಿ...ಇನ್ನಷ್ಟು ಮೆರುಗು ನೀಡಿದ್ದವು. ತುಂಬುಗೆನ್ನೆಗಳು ಯಾವಾಗಲೂ ಸೇಬಿನಂತೆ ರಾಗರಂಜಿತವಾಗಿರುತ್ತಿದ್ದವು. ತುಂಬು ಹರೆಯ ಇನ್ನಷ್ಟು ಚೆಲುವನ್ನು ತುಂಬಿತ್ತು. ಮನೆಯಲ್ಲಿ ಆಗಲೇ ಮದುವೆಯನ್ನೂ ಮಾಡುವ ಆಲೋಚನೆಯೂ ಅಂಕುರಿಸಿತ್ತು. ಪಹೆಲ್ಗಾಮ್ ಮುಖ್ಯರಸ್ತೆಯೊಂದಕ್ಕೆ ಅಂಟಿಕೊಂಡ ಒಂದು ಸಣ್ಣ ಓಣಿಯಲ್ಲಿ ಅಬೀದಾಳ ಪುಟ್ಟ ಮನೆಯಿತ್ತು. ಅಬೀದಾ ಮನೆಗೆ ಹೋಗಬೇಕೆಂದರೆ ಮುಖ್ಯರಸ್ತೆಯ ಮೂಲಕವೇ ಹೋಗಬೇಕಾಗಿತ್ತು. ಅಲ್ಲಿ ದೊಡ್ಡ ದೊಡ್ಡ ಅಂಗಡಿಗಳಿದ್ದವು. ಹಾಗಾಗಿ ಜನರ ಓಡಾಟದ ಜಾಗವಾಗಿತ್ತು. ತುಂಬಾ ಜನರು ಓಡಾಡುತ್ತಾರೆಂದು ಅಲ್ಲಿರುವ ಅಂಗಡಿಗಳ ಮುಂದೆ ಸದಾಕಾಲವೂ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ದರು. ಒಂದೊಂದು ಅಂಗಡಿಯ ಮುಂದೆ ಒಬ್ಬರು ಅಥವ ಮೂವರು ಆಯುಧದಾರಿಗಳಾಗಿ, ಸಜ್ಜಾಗಿ ವಿಗ್ರಹಗಳಂತೆ ನಿಂತೇ ಇರುತ್ತಿದ್ದರು. ಅವರ ಪಾಳಿ ಮುಗಿದಮೇಲೆ ಬೇರೆ ಸೈನಿಕರು ಬಂದು ಕಾವಲು ಮುಂದುವರೆಸುತ್ತಿದ್ದರು. ಅಬೀದಾ ಮನೆಯ ಬಳಿ ಇರುವ ರಸ್ತೆಯಲ್ಲಿ ಬೆಳಗಿನ ಹೊತ್ತು ನಿಲ್ಲುವ ಕಾಯಕ ವೀರಶೇಖರನದಾಗಿತ್ತು. ವೀರಶೇಖರ ಕರ್ನಾಟಕದ ಬೀದರ್ ಜಿಲ್ಲೆಯ ಭಾಲ್ಕಿ ಎಂಬ ಪುಟ್ಟ ಗ್ರಾಮದವನು. ತಂದೆ ತಾಯಿ ಇಬ್ಬರೂ ಅಂಗೈಯಗಲದ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದರು. ವೀರಶೇಖರ ಮೂರನೆಯಮಗ. ಇಬ್ಬರು ಅಕ್ಕಂದಿರಿಗೆ ಮದುವೆಯಾಗಿತ್ತು. ಇನ್ನೂ ಇಬ್ಬರು ತಮ್ಮಂದಿರು, ಒಬ್ಬ ತಂಗಿ ಇದ್ದ ಕಡುಬಡತನದ ಕುಟುಂಬ ಅವನದು. ಚಿಕ್ಕಂದಿನಿಂದ ದೇಶಪ್ರೇಮ ನರನಾಡಿಗಳಲ್ಲಿ ವ್ಯಾಪಿಸಿದ್ದರಿಂದ ದೊಡ್ಡವನಾದ ಮೇಲೆ ಸೈನ್ಯಕ್ಕೆ ಸೇರಿದ. ಬಡತನದಲ್ಲೇ ಬೆಳೆದಿದ್ದರೂ ವೀರಶೇಖರ ಕಟ್ಟುಮಸ್ತಾದ ಆಳಾಗಿಯೇ ಇದ್ದ. ಎತ್ತರದ ನಿಲುವು, ಆಕರ್ಷಕ ಮೈಕಟ್ಟು, ತೇಜೋವಂತ ಮೊಗವನ್ನು ಹೊಂದಿದ್ದ ವೀರಶೇಖರ ಯೋಧನ ಉಡುಪಿನಲ್ಲಿ ಚೆಲುವನಾಗಿ ಕಾಣಿಸುತ್ತಿದ್ದ. ಎದೆ ಸೆಟೆಸಿ ವಿಗ್ರಹದಂತೆ ನಿಂತಿರುವ ಅವನನ್ನು ನೋಡಿದರೆ ಹೆಮ್ಮೆಯ ಭಾವ ಮೂಡುವಂತಿತ್ತು.
ದಿನವೂ ಅಬೀದಾ ಕಟ್ಟಿಗೆಯನ್ನು ಹೊತ್ತು ಮನೆಗೆ ಬರುವ ಸಮಯದಲ್ಲೇ ವೀರಶೇಖರ ಅಂಗಡಿಯ ಮುಂದೆ ಪಹರೆಗೆ ನಿಲ್ಲುತ್ತಿದ್ದ. ವಿಗ್ರಹದಂತೆ ಅಲುಗಾಡದೆ ನಿಲ್ಲುತ್ತಿದ್ದ ಅವನ ಕಣ್ಣ ಗುಡ್ಡೆಗಳು ಮಾತ್ರ ಕಂಡೂ ಕಾಣದಂತೆ ಅಲುಗಾಡುತ್ತಾ ಸುತ್ತಲೂ ವೀಕ್ಷಿಸುತ್ತಿದ್ದವೇ ಹೊರತು, ಅವನು ಮಾತ್ರ ಒಂದು ಹೆಜ್ಜೆಯೂ ಕದಲದೆ ನಿಲ್ಲುತ್ತಿದ್ದ. ಒಂದು ದಿನ ಅಬೀದಾ ಅವನ ಮುಂದೆ ಹಾದು ಹೋಗುವಾಗ ಅವಳು ಕಿವಿಗೆ ಧರಿಸಿದ್ದ ಕುಂದಲಾ ಕಳಚಿ ಬಿದ್ದಿತು. ಎರಡೂ ಕೈಗಳಿಂದಲೂ ತಲೆಯ ಮೇಲೆ ಕಟ್ಟಿಗೆ ಹೊರೆ ಹೊತ್ತಿದ್ದರಿಂದ ಅವಳಿಗೆ ಬಗ್ಗಿ ಅದನ್ನು ತೆಗೆದುಕೊಳ್ಳಲಾಗಲಿಲ್ಲ. ಅಸಹಾಯಕಳಾಗಿ ಅವಳು ನಿಂತಿದ್ದರೂ ವೀರಶೇಖರ ಗಂಭೀರವಾಗಿ ನಿಂತೇ ಇದ್ದ. ಅವಳು ಕಟ್ಟಿಗೆ ಹೊರೆಯನ್ನು ಕೆಳಗೆ ಇಳಿಸಿ, ವೀರಶೇಖರನ ಕಾಲಬುಡದಲ್ಲೇ ಬಿದ್ದ ಕುಂದಲಾ ತೆಗೆದುಕೊಂಡು, ತಲೆ ಎತ್ತಿದ ಆ ಒಂದು ಕ್ಷಣದಲ್ಲಿ ಇಬ್ಬರ ಕಣ್ಣುಗಳೂ ಸಂಧಿಸಿದವು. ಅದೇಕೋ ಇಬ್ಬರ ಮೈಯಲ್ಲೂ ಮಿಂಚಿನ ಸಂಚಾರವಾದಂತಾಯಿತು. ಒಂದೇ ಕ್ಷಣ...ಅವನು ಸ್ಥಬ್ಧನಾಗಿ ನಿಂತೇ ಇದ್ದ. ಅವಳು ಕಟ್ಟಿಗೆ ಹೊರೆ ಹೊತ್ತುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದಳು. ಅಂದಿನಿಂದ ದಿನವೂ ಅಬೀದಾ ಕಟ್ಟಿಗೆ ತರಲು ಹೋಗುವಾಗ, ಬರುವಾಗ ಎಲ್ಲೋ ಒಂದು ಕ್ಷಣ ಅವರ ನೋಟ ಸಂಧಿಸಿದಂತಾಗುತ್ತಿದ್ದಿತು. ಆದರೆ ಅದಕ್ಕೆ ಮೀರಿ ಮತ್ತೇನೂ ನಡೆಯಲೇ ಇಲ್ಲ. ಹೀಗೇ ಸುಮಾರು ದಿನಗಳಾದವು. ಬರುಬರುತ್ತಾ ಆ ಒಂದು ಕ್ಷಣಕ್ಕಾಗಿಯೇ ಕಾಯುತ್ತಿದ್ದೆವೇನೋ ಎಂಬ ಒಂದು ಸಣ್ಣ ಭಾವ ಇಬ್ಬರ ಮನದಲ್ಲೂ ಹರಿದಾಡತೊಡಗಿತು.
ಅಂದೂ ಸಹ ಹಾಗೇ ಆಯಿತು. ಕಡುಗೆಂಪು ಬಣ್ನದ ಫಿರನ್ ಮತ್ತು ಫೂಟ್ ತೊಟ್ಟ ಅಬೀದಾ ಎಂದಿಗಿಂತಲೂ ಮೋಹಕವಾಗಿ ಕಾಣುತ್ತಿದ್ದಳು. ವೀರಶೇಖರನ ಕಣ್ಣುಗಳು ಕಂಡೂ ಕಾಣದಷ್ಟು ಮಿಸುಕಾಡಿದವು. ಅಬೀದಾ ಅವನ ಮುಂದೆ ಬಂದಾಗ ಅವನೆಷ್ಟು ನಿಯಂತ್ರಿಸಿಕೊಂಡರೂ ಸಣ್ಣದಾಗಿ ಸೀನುವಂತಾಯ್ತು. ಅಬೀದಾ ಸುಮ್ಮನೆ ನಡೆದು ಮನೆಗೆ ಹೋದಳು. ಕಟ್ಟಿಗೆ ಹೊರೆಯನ್ನು ಮೂಲೆಯಲ್ಲಿ ಹಾಕಿ, ಚಿಕ್ಕಮ್ಮನಿಗಾಗಿ ಖಾಹ್ವಾ ಮಾಡಲು ಒಲೆಯ ಮೇಲೆ ನೀರಿಟ್ಟಳು. ಕುದಿಯುವ ನೀರನ್ನೇ ನೋಡುತ್ತಾ ನಿಂತಳು. ನೀರಿಗೆ ಕೇಸರಿ ದಳ, ಸಕ್ಕರೆ ಹಾಕಿದಳು. ಅದು ಕುದಿಯುತ್ತಿರುವಾಗ "ಏಕೋ ಅವನಿಗೂ ಶೀತ ಆದಂತಿದೆ. ಸ್ವಲ್ಪ ಖಾಹ್ವಾ ಕೊಡಲೇ...", ಎಂದುಕೊಂಡಳು. ನಂತರ, "ನನಗೂ ಅವನಿಗೂ ಏನು ಸಂಬಂಧ...ಅಷ್ಟಕ್ಕೂ ಸೈನಿಕರಿಗೆ ನಾವೇನೂ ಕೊಡುವಂತಿಲ್ಲ. ಕೊಟ್ಟರೆ ಅನುಮಾನ ಬರುತ್ತದೆ...ದೊಡ್ಡ ಕದನವೇ ಆಗಬಹುದು!! ಅವರೂ ಸಹ ಹಾಗೆಲ್ಲಾ ಏನೂ ತೆಗೆದುಕೊಳ್ಳುವುದಿಲ್ಲ...ಈ ಯೋಚನೆ ನನಗೇಕೆ ಬಂದಿತು...ಅಬ್ಬುಗೆ ಗೊತ್ತಾದರೆ ಏನಿಲ್ಲ", ಎಂದುಕೊಳ್ಳುತ್ತಾ ಚಕ್ಕೆ-ಏಲಕ್ಕಿಯ ಪುಡಿಯನ್ನು ಹಾಕಿ ಇನ್ನಷ್ಟು ಕುದಿಸಿದಳು. ಹೊಂಬಣ್ಣದ ಖಾಹ್ವಾ ಸಿದ್ಧವಾದ ಮೇಲೆ ಪಿಂಗಾಣಿ ಕುಡಿಕೆಗೆ ಹಾಕಿಕೊಂಡು, ಚಿಕ್ಕಮ್ಮ ಹಫೀಜಾಗೆ ಕೊಡಲು ಹೋದಳು. ಅವಳು ಖಾಹ್ವಾ ಹಿಡಿದುಕೊಂಡು ಹೋಗುವಾಗ ಅದರ ಪರಿಮಳ ವೀರಶೇಖರನ ಮೂಗಿಗೆ ಬಡಿಯಿತು. "ನಾನೇಕೆ ಇವಳನ್ನು ಗಮನಿಸುತ್ತಿದ್ದೇನೆ....ಇದು ತಪ್ಪು...ನಾನು ಸೈನಿಕ...ಯಾರೋಡನೆಯೂ ಬೆರೆಯಬಾರದು...ಅದರಲ್ಲೂ ಅವಳು ಕಾಶ್ಮೀರಿ ಕನ್ಯೆ. ಎಷ್ಟೋ ಕಾಶ್ಮೀರಿಯರಿಗೆ ನಾವು ಸೈನಿಕರೆಂದರೆ ಆಗುವುದೇ ಇಲ್ಲ. ಅವಳನ್ನು ಮಾತನಾಡಿಸಿದರೂ ಸಾಕು...ದೊಡ್ಡ ಹಗರಣವಾಗುತ್ತದೆ...ಕ್ಯಾಪ್ಟನ್ ಏನಿಲ್ಲ...ಮಂಗಳಾರತಿ ಮಾಡಿಬಿಡುತ್ತಾರೆ...", ವೀರಸೇಖರ ಯೋಚನೆಗಳನ್ನು ಕೊಡವಿ ರಸ್ತೆಯೆಡೆಗೆ ದೃಷ್ಟಿ ನೆಟ್ಟ.
ಮಾರನೆ ದಿನ ಅಬೀದಾ ಕಟ್ಟಿಗೆ ಹೊರೆ ಹೊತ್ತು ಬರುತ್ತಿರುವಾಗ ಅವಳ ಕಿವಿಯ ಕುಂದಲಾ ಮತ್ತೆ ಕೊಂಡಿ ಕಳಚಿ ಬಿದ್ದಿತು. ಈ ಬಾರಿ ವೀರಶೇಖರ ನಿಂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಬಿದ್ದಿತು. ವೀರಶೇಖರ ಸುಮ್ಮನೇ ನಿಂತಿದ್ದ. ಅಬೀದಾಳಿಗೆ ಏನನ್ನಿಸಿತೋ ಏನೋ ಒಂದರೆ ಕ್ಷಣ ನಿಂತವಳು, ಕಟ್ಟಿಗೆ ಹೊರೆಯನ್ನು ಕೆಳಗಿಳಿಸದೆ ಹಾಗೇ ಮುಂದೆ ಸಾಗಿ, ಮನೆಗೆ ಹೋದಳು. ಆಗಲೂ ವೀರಶೇಖರ ಸ್ಥಬ್ಧನಾಗಿ ನಿಂತೇ ಇದ್ದ. ಕುಂದಲಾ ಕಲ್ಲುಗಳ ಸಂಧಿಯಲ್ಲಿ ಬಿದ್ದಿದ್ದರಿಂದ ಅಲ್ಲಿ ನಡೆದಾಡುವ ಯಾರಿಗೂ ಕಾಣಲಿಲ್ಲ. ಮಧ್ಯಾಹ್ನವಾದಾಗ ವೀರಶೇಖರನ ಪಾಳಿ ಮುಗಿಯಿತು. ಅವನ ಬದಲಿಗೆ ನಿಲ್ಲಲು ಬಲಬೀರ ಸಿಂಗ್ ಬಂದ. ಪರಸ್ಪರ ಸೆಲ್ಯೂಟ್ ಮಾಡಿದ ಮೇಲೆ, ವೀರಶೇಖರ ಆ ಜಾಗದಿಂದ ಕದಲಿದ. ಜೀಪ್ ಹತ್ತಲು ಹೋಗುವಾಗ , ಶೂ ಸರಿ ಮಾಡಿಕೊಳ್ಳುವವನಂತೆ ನಟಿಸಿ ಬಗ್ಗಿದ. ಮಿಂಚಿನಂತೆ ಆಕಡೆ ಈಕಡೆ ನೋಡಿ, ಅಬೀದಾಳ ಕಿವಿಯ ಕುಂದಲಾ ತೆಗೆದುಕೊಂಡು ಜೇಬಿಗಿಳಿಸಿದ. ಸಧ್ಯ ಯಾರೂ ಗಮನಿಸಲಿಲ್ಲ ಎಂದುಕೊಂಡು ಜೀಪ್ ಹತ್ತಿದ. ಆದರೆ ಅದನ್ನು ಇನ್ನೆರಡು ಕಂಗಳು ದಿಟ್ಟಿಸಿದವೆಂದು ಅವನಿಗೆ ಗೊತ್ತಾಗಲೇ ಇಲ್ಲ!! ಅಬೀದಾ ಮನೆಗೆ ಬಂದವಳೇ ಕಟ್ಟಿಗೆ ಹೊರೆಯನ್ನು ಮೂಲೆಗೆ ಹಾಕಿ,ಮನೆಯ ಹಿಂಬದಿಯ ಕಿಟಕಿಯಲ್ಲಿ ಕುಳಿತುಬಿಟ್ಟಿದ್ದಳು. ಆ ಕಿಟಕಿಯ ಮೂಲಕ ನೋಡಿದರೆ ವೀರಶೇಖರ ನಿಂತಿರುವುದು ಕಾಣಿಸುತ್ತಿದ್ದಿತು. ಅವಳಿಗೆಂತಹುದೋ ಕುತೂಹಲ. ಅಬ್ಬು ಬೇರೆ ಮನೆಯಲ್ಲಿ ಇರಲಿಲ್ಲ. ಅಮ್ಮಿ ತೀರಿ ಹೋಗಿ ನಾಲ್ಕು ವರಷಗಳಾಗಿದ್ದವು. ಹಫೀಜಾ ಚಿಕ್ಕಮ್ಮ ಅಮ್ಮಿಯ ತಂಗಿ. ಆಕೆಯನ್ನೇ ಅಬ್ಬು ಮರು ಮದುವೆಯಾಗಬಹುದಿತ್ತು. ಆದರೆ ಹಫೀಜಾ "ಅರ್ಧ ವಿಧವೆ". ಒಮ್ಮೆ ಅಬೀದಾಳೇ ತನ್ನ ಅಬ್ಬುನನ್ನು ಕೇಳಿದ್ದಳು. "ಅಬ್ಬು, ನೀನೇಕೆ ಖಾಲಾನ್ನ[ಚಿಕ್ಕಮ್ಮ] ಮದುವೆಯಾಗಬಾರದು?", ಎಂದು. "ಅಯ್ಯೋ ಭೇಟಿ, ಹಫೀಜಾ ಅರ್ಧ ವಿಧವೆ. ಮದುವೆಯಾಗಲು ಬರುವುದಿಲ್ಲ" ಎಂದ ಅಬ್ಬು. ಮುಗ್ಧಳಾದ ಅಬೀದಾ ಏಕೆಂದು ಕೇಳಿದಾಗ, " ಗಂಡ ಸತ್ತಿರುವುದು ಖಚಿತವಾಗಿ ಗೊತ್ತಿದ್ದರೆ ಆಕೆ ವಿಧವೆ ಆಗ್ತಾಳೆ. ಆಗ ಅವಳನ್ನು ಯಾರು ಬೇಕಾದರೂ ಮದುವೆಯಾಗಬಹುದು. ಆದರೆ ಹಫೀಜಾ ಗಂಡ ಭಯೋತ್ಪಾದನೆಯ ಚಟುವಟಿಕೆಯಲ್ಲಿ ಸಿಲುಕಿದ್ದ. ಅವನನ್ನು ಪೋಲೀಸರು ಬಂಧಿಸಿದ್ದರು ಅಂತ ಕೆಲವರು ಹೇಳ್ತಾರೆ. ಇನ್ನೂ ಕೆಲವರು ಭಯೋತ್ಪಾದಕರು ಕರೆದುಕೊಂಡು ಹೋದರು ಅಂತಾ ಹೇಳ್ತಾರೆ. ಇನ್ನೂ ಕೆಲವರು ಪೋಲೀಸರ ಗುಂಡಿಗೆ ಬಲಿಯಾದ ಅಂತಾನೂ ಹೇಳ್ತಾರೆ...ಹೀಗೆ ಗಂಡ ಸತ್ತಿರುವುದು ಅನುಮಾನವಿದ್ದಾಗ, ಆತನ ಹೆಂಡತಿಯನ್ನು ಅರ್ಧ ವಿಧವೆ ಎಂದು ಹೇಳ್ತಾರೆ. ಅವಳನ್ನು ಮದುವೆಯಾಗಲು ನಮ್ಮ ಧರ್ಮದಲ್ಲಿ ಸಮ್ಮತಿಯಿಲ್ಲ...", ಅಬ್ಬು ಹೇಳಿದಾಗ ಅಬೀದಾ ಸುಮ್ಮನಾಗಿದ್ದಳು. ಆಗಿನಿಂದ ಮದುವೆಯ ಬಗ್ಗೆ, ಗಂಡನ ಬಗ್ಗೆ ಅವಳಿಗೆ ಭಯ ಆವರಿಸಿತ್ತು. ಆ ಭಯವನ್ನೂ ಮೀರಿ ವೀರಶೇಖರನನ್ನು ನೋಡುವಾಗ ಒಂದು ತೆಳುವಾದ ಲಹರಿ ಹರಿದಾಡುತ್ತಿದ್ದಿತು. ಅವಳ ತಂದೆಗೋ ಇದ್ದೊಬ್ಬ ಮಗಳ ಮದುವೆ ಮಾಡುವ ಚಿಂತೆಯಷ್ಟೇ ಇದ್ದಿತು. ಆ ದಿನವೂ ಯಾವುದೋ ಗಂಡು ನೋಡಲು ಹೋಗಿದ್ದ. ಕೆಲಸವೇನೂ ಇರದಿದ್ದರಿಂದ ಅಬೀದಾ ಕಿಟಕಿಯ ಬಳಿಯೇ ಕುಳಿತಳು. ವೀರಶೇಖರ ಹೋಗುವಾಗ ತನ್ನ ಕುಂದಲಾ ತೆಗೆದುಕೊಂಡದ್ದು ಸ್ಪಷ್ಟವಾಗಿ ಕಂಡಿತು. ಅವಳ ಕಂಗಳು ಅರಳಿದವು. ಅವಳ ಹೃದಯ ನಗಾರಿಯಂತೆ ಹೊಡೆದುಕೊಂಡಿತು.
ಬೆಳಿಗ್ಗೆ ಅಬೀದಾ ಕಟ್ಟಿಗೆ ತರಲು ಹೊರಟಾಗ ಅವಳ ಅಬ್ಬು ," ಬೇಟಿ, ಬೇಗ ಬಂದು ಬಿಡು...ಇವತ್ತು ನಿನ್ನ ಮದುವೆ ನಿಶ್ಚಯ ಮಾಡ್ತೀವಿ, ಹಿಮ ಬೀಳೋದ್ರೊಳಗೆ ಮದುವೆ ಮಾಡ್ಬೇಕು", ಎಂದ. ಅಬೀದಾಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ತಲೆಯಾಡಿಸಿ ಕಟ್ಟಿಗೆ ತರಲು ಹೋದಳು. ಅಂಗಡಿಯ ಮುಂದೆ ಬಂದಾಗ, ಹೇಗೋ ಧೈರ್ಯ ಮಾಡಿ ಕಣ್ಣೆತ್ತಿ ನೋಡಿದಳು. ಆದರೆ ಅಲ್ಲಿ ವೀರಶೇಖರ ಇರಲಿಲ್ಲ!! ಆ ಜಾಗದಲ್ಲಿ ಬೇರೆ ಸೈನಿಕ ನಿಂತಿದ್ದ. ಒಳಗೇ ವೇದನೆಯ ಎಳೆಯೊಂದು ಹರಿದಾಡಿದಂತಾಯ್ತು. "ಅವನೇಕೆ ಇಂದು ಬಂದಿಲ್ಲ...ಬೇರೆ ಏರಿಯಾದಲ್ಲಿ ಪಹರೆಗೆ ಹೋಗಿರಬಹುದೇ...ಏಕೆ...ಏಕೆ...ಇನ್ನು ಅವನು ನಂಗೆ ಸಿಗುವುದಿಲ್ಲ...ನಾನಿನ್ನು ಅವನ ಬಗ್ಗೆ ಯೋಚಿಸಬಾರದು...ಅಬ್ಬುಗೆ ಗೊತ್ತಾದರೆ ಏನಿಲ್ಲ. ಅಬ್ಬುಗೆ ಮೊದ್ಲೇ ಪೊಲೀಸರು, ಸೈನಿಕರು, ಭಯೋತ್ಪಾದಕರು...ಅಂದ್ರೇ ಆಗೋಲ್ಲ..ಎಲ್ಲಿ ನಾನೂ ಮುಂದೆ ಅರ್ಧ ವಿಧವೆ ಆಗಿಬಿಡ್ತಿನೋ ಅಂತಾ ಭಯ...ಅದಕ್ಕೇ ನನ್ನ ಯಾರಾದರೂ ವ್ಯಾಪಾರಿಗೊ, ಟ್ಯಾಕ್ಸಿ ಡ್ರೈವರ್ ಗೋ ಕೊಟ್ಟು ಮದುವೆ ಮಾಡಬೇಕಂತ ಇರೋದು...", ಯೋಚಿಸುತ್ತಲೇ ಕಟ್ಟಿಗೆ ಹೊರೆಯನ್ನು ಹೊತ್ತು ತಂದಳು. ಕೆಲವು ದಿನಗಳಾದವು. ಅವನು ಕಾಣಲೇ ಇಲ್ಲ. ಅವಳ ಮದುವೆಯೂ ಸರಳವಾಗಿ ನಡೆಯಿತು. ನೆಲಹಾಸು ಮಾರುವ ಇಮ್ರಾನ್ ಅವಳನ್ನು ವರಿಸಿ, ತನ್ನ ಮನೆಗೆ ಕರೆದುಕೊಂಡು ಹೋದ. ಗಂಡನ ಮನೆಗೆ ಹೋಗುವಾಗಲೂ ತಿರುತಿರುಗಿ ನೋಡಿದಳು. ಅಲ್ಲಿ ವೀರಶೇಖರ ಕಾಣಿಸಲಿಲ್ಲ!!
* * * * *
ಅಂದು ಬೇತಾಬ್ ವ್ಯಾಲಿಯ ಪ್ರದೇಶದಲ್ಲಿ ಕೆಲಸ ಮುಗಿಸಿ, ಕ್ಯಾಂಪ್ ಗೆ ವಾಪಸ್ಸು ಬಂದ ವೀರಶೇಖರನಿಗೆ ತುಂಬಾ ಸುಸ್ತಾಗಿತ್ತು. ಹದವಾದ ಬಿಸಿನೀರಿನಲ್ಲಿ ತುಂಬಾ ಹೊತ್ತು ಸ್ನಾನ ಮಾಡಿ ಬಂದಮೇಲೆ ಮನಸ್ಸಿಗೆ ಸ್ವಲ್ಪ ಹಾಯೆನಿಸಿತು. ಊಟದ ಹಾಲಿಗೆ ಹೋಗಲು ಸಿದ್ಧನಾಗತೊಡಗಿದ. ವಾರ್ಡ್ ರೋಬ್ ತೆಗೆದು, ಅಡಿಯಲ್ಲಿದ್ದ ಟೀ ಶರ್ಟ್ ಎಳೆದು ತೆಗೆದುಕೊಂಡ. ಏನೋ ಕೆಳಗೆ ಬಿದ್ದಂತಾಯಿತು. ಜೊತೆಗೆ ಗೆಜ್ಜೆಯ ಸದ್ದೂ ಬಂದಿತು. ಕುತೂಹಲದಿಂದ ಬಗ್ಗಿ ತೆಗೆದುಕೊಂಡು ನೋಡಿದರೆ ಅದು, ಅಬೀದಾಳ ಕಿವಿಯ ಕುಂದಲಾ!! ಅದನ್ನು ಕೈಯಲ್ಲಿ ಹಿಡಿದು, "ಓ...ಇದಾ, ಆ ಹುಡುಗಿಯ ಕಿವಿಯ ಆಭರಣ...ಎಂಥ ಸುಂದರಿ ಆಕೆ...ಅವಳ ಮೇಲೆ ನನಗೇಕೆ ಮೋಹವಾಯ್ತೋ ಗೊತ್ತಿಲ್ಲ! ಅವಳಿಗೂ ನನ್ನ ಮೇಲೆ ಇಷ್ಟವಾಗಿತ್ತು...ಅವಳ ಕಣ್ಣುಗಳೇ ಹೇಳುತ್ತಿದ್ದವು...ಈ ಕುಂದಲಾನ್ನ ನಾನು ತೆಗೆದುಕೊಳ್ಳಲಿ ಅಂತಾನೇ ಅವಳು ಆ ದಿನ ಹಾಗೆ ಬಿಟ್ಟು ಹೋಗಿದ್ದು!! ಅವಳ ಹೃದಯದ ಭಾಷೆ ನನಗೆ ಚೆನ್ನಾಗಿ ಅರ್ಥವಾಗಿತ್ತು...ಆದರೆ, ನಾವಿಬ್ಬರೂ ಒಂದಾಗೋದು ಈ ಜನ್ಮದಲ್ಲಿ ಸಾಧ್ಯವೇ?!! ಎಂದಿಗೂ ಸಾಧ್ಯವಿಲ್ಲ...ಅವಳಿಗೆ ಕಾಶ್ಮಿರ ಬಿಟ್ಟು ಬೇರೆ ಪ್ರದೇಶ ಗೊತ್ತಿಲ್ಲ....ನಾನು ನೋಡಿದ್ರೆ ಅಪ್ಪಟ ಬಯಲುಸೀಮೆಯವನು. ಬೀದರ್ ನ ಆ ಉಗ್ರ ಬಿಸಿಲ ಝಳವನ್ನು ಈ ಹಾಲಿನ ಗೊಂಬೆ ತಡೆದುಕೊಂಡೀತೆ?! ...ಅವಳು ತಡೆದುಕೊಂಡರೂ...ಅವ್ವ ಅವಳನ್ನು ಸೊಸೆಯೆಂದು ಸ್ವೀಕರಿಸಿಯಾಳೇ...ಈ ಕಾಶ್ಮೀರಿ ಹುಡುಗಿಯನ್ನು ನಾನೇನಾದರೂ ಮದುವೆಯಾದರೆ ಅವ್ವ ಎದೆ ಹೊಡೆದುಕೊಂಡಾಳು....ಇನ್ನೂ ನನಗೆ ತಮ್ಮ-ತಂಗಿಯರ ಜವಾಬ್ದಾರಿ ಇದೆ...ನಾನೀಗಲೇ ಮದುವೆಯಾಗುವ ಹಾಗಿಲ್ಲ...ಈ ಹುಡುಗಿಯನ್ನು ಮದುವೆಯಾಗಿ ನಾನು ಇಲ್ಲೇ ನೆಲೆಸುವಂತೆಯೂ ಇಲ್ಲ!! ಹಾಗೇನಾದರೂ ನಾನು ಆಲೋಚನೆ ಮಾಡೋದು ಗೊತ್ತಾದರೂ ಸಾಕು, ನನ್ನ ಕೆಲಸಾನೇ ಹೋಗುತ್ತೆ!...ಇದು ಸಾಧ್ಯವೇ ಇಲ್ಲದಿರುವಾಗ ಈ ರೀತಿ ಆಲೋಚನೆ ಮಾಡುವುದು ತರವೇ...?! ಬೇಡವೇ ಬೇಡ...ನಾನು ಹೀಗೆ ಚಿಂತಿಸಲೇಬಾರದು...ಆ ಹುಡುಗಿ ನನ್ನ ಜೀವನದಲ್ಲಿ ಒಂದು ಝಲಕ್ ಮಾತ್ರ!! ಅವಳೆಂದೂ ನನ್ನವಳಾಗಲು ಸಾಧ್ಯವೇ ಇಲ್ಲ...ಆ ಏರಿಯಾಕ್ಕೆ ನಾನು ಹೋಗೋದು ಮತ್ತೆ ಯಾವಾಗಲೋ ಏನೋ...ಮತ್ತೇ ಆ ಹುಡುಗಿಯನ್ನು ನಾನು ನೋಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ! ಅವಳೇನಿದ್ದರೂ ಒಮ್ಮೆ ನವಿರಾಗಿ ಸೋಕಿದ ಒಂದು ಮೌನ ಲಹರಿಯಷ್ಟೇ....ಎಷ್ಟಾದರೂ ಯೋಧನಲ್ಲವೇ ನಾನು...ಎಲ್ಲದರ ವಿರುದ್ಧವೂ ಹೋರಾಡಬೇಕು...ಭಾವನೆಗಳ ವಿರುದ್ಧವೂ!! ನನ್ನ ಹಾಗೆ ಅವಳೂ ಸಹ ಯೋಧಳೇ!!... ಎಲ್ಲೇ ಇರಲಿ ಆ ಚೆಲುವೆ...ಸುಖವಾಗಿರಲಿ...", ಮುಗುಳ್ನಗುತ್ತಾ ಕುಂದಲಾವನ್ನು ಒಮ್ಮೆ ಪ್ರೀತಿಯಿಂದ ಸವರಿ, ತನ್ನ ಸೂಟ್ ಕೇಸಿನ ತಳದಲ್ಲಿ ಭದ್ರವಾಗಿ ಮುಚ್ಚಿಟ್ಟ.
-ಕಿರಣ್ ಪ್ರಸಾದ್ ರಾಜನಹಳ್ಳಿ# 691/ಸಿ, "ಅತೃ", 22ನೇ ಕ್ರಾಸ್,
19ನೇ ಮೇನ್, ಹೆಚ್.ಎಸ್.ಆರ್ 2ನೇ ಸೆಕ್ಟರ್,
ಬೆಂಗಳೂರು-560102
ಫೋನ್: 9449459766
Show quoted text
--
KIRAN PRASAD R