Friday, October 18, 2019




                                                        "ಸಂವಹನ"

"VU2JAY ಕಾಲಿಂಗ್....VU2JAY ಕಾಲಿಂಗ್...ಕೆನ್ ಯು ಹಿಯರ್ ಮಿ", ರೇಡಿಯೊ ತರಂಗಗಳ ಮೂಲಕ ನನ್ನ ಸಂದೇಶವನ್ನು ಹರಿಯಬಿಟ್ಟೆ. ನನ್ನ ರಿಸೀವರ್ ಗೆ ಯಾವುದೋ ಸಂದೇಶವೂ ರವ್ವಾನೆಯಾಯ್ತು. ಸಿಗ್ನಲ್  ಅಷ್ಟು ಸ್ಪಷ್ಟವಾಗಿರಲಿಲ್ಲ. ಮಾತು ಅಸ್ಪಷ್ಟವಾಗಿ ಕೇಳುತ್ತಿದ್ದಿತು. ಆಂಟೆನಾ ಸರಿ ಮಾಡಲು ಟೆರೇಸ್ ಮೇಲೆ ಹೋದೆ. ಅದನ್ನು ಸ್ವಲ್ಪ ತಿರುಗಿಸಿದ ಮೇಲೆ ರಿಸೀವರ್ ಗೆ ಬಂದ ಸಂದೇಶ ಸ್ಪಷ್ಟವಾಗಿ ಕೇಳಿತು. "AB2OXZ ಸ್ಟ್ಯಾಂಡಿಂಗ್...", ಎಂದು ಅತ್ತಲಿಂದ  ಉತ್ತರ ಬಂದಾಗ ಕುತೂಹಲದಿಂದ ಆಲಿಸಿದೆ. ಅದು ಅಮೆರಿಕಾದ ಕಾಲ್ ಸೈನ್! ಹಾಗಾದರೆ ಈಗ ನನ್ನ ಜೊತೆ ಮಾತನಾಡುತ್ತಿರುವ ವ್ಯಕ್ತಿ ಅಮೆರಿಕಾದ ಹವ್ಯಾಸಿ ಹ್ಯಾಮ್. ಅವನ ಜೊತೆ ಮಾತು ಮುಂದುವರಿಸಿದೆ. ಟೆಕ್ಸಾಸ್ ರಾಜ್ಯದ ವೇಕೊ ನಗರದವನಾದ  ಆತನ ಹೆಸರು ಡಿಕ್ ಪೆರಿ ಎಂದು. ವಕೀಲನಾಗಿರುವ  ಅವನು ತುಂಬಾ ಉತ್ಸಾಹದಿಂದ ತನ್ನ ಹವ್ಯಾಸಗಳ ಬಗ್ಗೆ ಹೇಳುತ್ತಿದ್ದ. ಅಷ್ಟುಹೊತ್ತಿಗೆ ನನ್ನ ತಮ್ಮನ ಮಗಳು ಸಾನ್ವಿ ನನ್ನನ್ನು ಹುಡುಕುತ್ತಾ ಟೆರೇಸ್ ಗೆ ಬಂದಳು. "ಅತ್ತೇ, ನೀವು ಇಲ್ಲಿದ್ದೀರಾ?...ಊಟಕ್ಕೆ ಬರಬೇಕಂತೆ...ಎಲ್ರೂ ಕಾಯ್ತಾ ಇದ್ದಾರೆ", ಎಂದಳು. ನಾನು ಡಿಕ್ ಪೆರಿಗೆ "ಸೆವೆಂಟಿ ತ್ರೀ ಡೆ VU2JAY" ಎಂದು ಹೇಳಿ ಮಾತುಮುಗಿಸಿದೆ. "ಏನತ್ತೇ ಅದು?...ಸೆವೆಂಟಿ ತ್ರೀ ಎಂದು ಯಾಕೆ ಹೇಳಿದ್ರಿ?", ಸ್ವಾನಿ ಕಂಗಳನ್ನು ಅರಳಿಸಿ ಕೇಳಿದಳು. ನಾನು ರಿಸೀವರ್ ಆಫ್ ಮಾಡುತ್ತಾ "ಅದು ಹ್ಯಾಮ್ ನಲ್ಲಿ ಬಳಸುವ ಕೋಡ್ ಲಾಂಗ್ವೇಜ್...ಸೆವೆಂಟಿ ತ್ರೀ ಎಂದರೆ ಅಭಿನಂದನೆಗಳು ಅಂತ ಅರ್ಥ...", ಎಂದು ಅವಳಿಗೆ ವಿವರಿಸುತ್ತಾ ಕೆಳಗೆ ಬಂದೆ. ತಮ್ಮನ ಹೆಂಡತಿ ಉತ್ತರಾ , "ಅತ್ತಿಗೆ, ಬನ್ನಿ ಬನ್ನಿ...ನಿಮಗೆ ಇಷ್ಟ ಅಂತ ವತ್ತು ಶ್ಯಾವಿಗೆ ಮಾಡಿದ್ದೇನೆ", ಎಂದಳು. ವತ್ತು ಶ್ಯಾವಿಗೆ ಎಂದ ಕೂಡಲೇ ಅಮ್ಮನ ನೆನಪಾಯ್ತು. ನನಗೆ ಇಷ್ಟ ಅಂತ  ಅಮ್ಮ ವಾರಕ್ಕೊಮ್ಮೆಯಾದರೂ ಅದನ್ನು ಮಾಡುತ್ತಿದ್ದಳು. ಶ್ಯಾವಿಗೆ ಯಂತ್ರದ ಹಿಡಿ ತಿರುಗಿಸುವುದು ತಮ್ಮ ಅಂಕಿತ್ ನ ಕೆಲಸ. ಅವನು ತಿರುಗಿಸುತ್ತಿದ್ದರೆ ನಾನು ತಟ್ಟೆಯನ್ನು ಅದರ ಕೆಳಗೆ ಹಿಡಿದು ಮೆಲ್ಲಗೆ ತಿರುಗಿಸುತ್ತಾ ಶ್ಯಾವಿಗೆಯನ್ನು ಅಗಲವಾಗಿ ಬೀಳುವಂತೆ ನೋಡಿಕೊಳ್ಳಬೇಕಾಗಿತ್ತು. ಹಿಡಿಯನ್ನು ತಿರುಗಿಸಿ ತಿರುಗಿಸಿ ಕೈ ನೋಯುತ್ತಿದ್ದುದರಿಂದ ತಮ್ಮನಿಗೆ  ವತ್ತು ಶ್ಯಾವಿಗೆಯೆಂದರೆ ಎಲ್ಲಿಲ್ಲದ ಸಿಟ್ಟು. ಅದನ್ನು ಮಾಡಬೇಡಿ ಎಂದು ಕೂಗಾಡುತ್ತಿದ್ದ. " ಅದಿತಿಯಕ್ಕನಿಗೆ ಇಷ್ಟ  ಅಂತ ಯಾವಾಗ್ಲೂ ಅದನ್ನೇ ಮಾಡ್ತೀರಾ...", ಎಂದು ಜಗಳವಾಡ್ತಾ ಇದ್ದ. ಆಗ ಅಮ್ಮ " ಅವಳು ಮದುವೆಯಾಗಿ ಬೇರೆ ಮನೆಗೆ ಹೋಗೋ ಹುಡುಗಿ ಕಣೋ...ಅಮ್ಮನ ಮನೆಯಲ್ಲಿ ಇರೋ ತನಕ ಅವಳಿಗಿಷ್ಟದ ತಿನಿಸು ತಿನ್ನಲಿ ಬಿಡು", ಎನ್ನುತ್ತಿದ್ದರು. ಅದೇನೋ ಅಮ್ಮನಿಗೆ ನಾನು ಹುಟ್ಟಿದಾಗಿನಿಂದಲೂ ನನ್ನ ಮದುವೆಯದೇ ಕನಸು. ಯಾವ ಸಾಮಾನನ್ನೂ ನೋಡಿದರೂ ಸಾಕು "ಅದಿತಿ ಮದುವೆಗೆ ಬೇಕು", ಎಂದು ಎತ್ತಿಡುತ್ತಿದ್ದಳು. ನನಗೆ ಅಷ್ಟು ಆದ್ಯತೆ ಕೊಡುವುದನ್ನು ನೋಡಿ ಅಂಕಿತ್ ಸಿಟ್ಟು ಇನ್ನೂ ಹೆಚ್ಚಾಗುತ್ತಿದ್ದಿತು. "ಅವಳನ್ನು ಇಲ್ಲೇ ಇಟ್ಟುಕೊಳ್ಳಿ...ನಾನೇ ಮದುವೆಯಾಗಿ ಬೇರೆ ಮನೆಗೆ ಹೋಗ್ತೇನೆ. ನನಗಿಷ್ಟವಾದ್ದನ್ನೇ ಮಾಡಿ", ಎಂದು ಮುನಿಸಿಕೊಂಡು ಹೇಳುವಾಗ ನಾವೆಲ್ಲಾ ಜೋರಾಗಿ ನಗುತ್ತಿದ್ದೆವು. ಅದೆಲ್ಲಾ ನೆನಪಾಗಿ ನನ್ನ ಕಂಗಳಲ್ಲಿ ತೆಳುವಾಗಿ ನೀರು ತುಂಬಿಕೊಂಡಿತು. ಈಗ ಅಮ್ಮ ಇಲ್ಲ. ನಾನು ಶಾಶ್ವತವಾಗಿ ತವರುಮನೆಯಲ್ಲಿಯೇ ಉಳಿದೆ. ಯಾವುದೂ ನಾವೆಣಿಸಿದಂತೆ ಆಗುವುದೇ ಇಲ್ಲವೆಂದೆನ್ನಿಸಿ ಹೃದಯ ಭಾರವಾಯ್ತು. ನನಗೆ ನೆನಪಾದುದೆಲ್ಲಾ ಅಂಕಿತ್ ಗೂ ನೆನಪಾಗಿರಬೇಕು. ಅವನ ಕಂಗಳೂ ಹನಿಗೂಡಿದವು. "ಅದ್ಯಾವ ಘಳಿಗೆಯಲ್ಲಿ ನಾನು ಹಾಗೆಂದೆನೋ ಕಣೇ...ನೀನು ಒಂಟಿಯಾಗಿ ಉಳಿಯಬೇಕಾಯ್ತು....ಸಾರಿ ಕಣೇ... ನಿನ್ನ ಮದುವೆ ಬಗ್ಗೆ ಅಮ್ಮ  ಅದೆಷ್ಟು ಕನಸು  ಕಂಡಿದ್ದಳು...ಆದರೆ ಅದೇ ನೆರವೇರಲಿಲ್ಲ ನೋಡು", ಎಂದನು. "ಹೋಗಲಿ ಬಿಡೋ...ನಾನೇನು ಒಂಟಿಯಲ್ಲ. ನನಗೆ ಎಷ್ಟೊಂದು ಹವ್ಯಾಸಗಳಿವೆಯಲ್ಲಾ...ಅದಕ್ಕೇ ನಾನು ಹ್ಯಾಮ್ ಕಲಿತದ್ದು. ಪರಿಚಯವೇ ಇಲ್ಲದ ವ್ಯಕ್ತಿ ಜೊತೆ ಮಾತಾಡುವಾಗ ನಾನು ಕ್ಷಣಕ್ಷಣಕ್ಕೂ ಹೊಸ ಅದಿತಿಯಾಗಿಬಿಡ್ತೇನೆ...ಈಗ ಹಳೆಯ ಮಾತೇಕೆ...ನೆಮ್ಮದಿಯಾಗಿ ವತ್ತು ಶ್ಯಾವಿಗೆ ತಿನ್ನಲು ಬಿಡು", ತಮಾಷೆ ಮಾಡಿ ವಾತಾವರಣವನ್ನು ತಿಳಿ ಮಾಡಿದೆ. 


      ಊಟ ಮಾಡಿದ ಮೇಲೆ ರೂಮಿಗೆ ಬಂದು ಮತ್ತೇ ಹ್ಯಾಮ್ ರಿಸೀವರ್  ಹಿಡಿದು ಕುಳಿತೆ. ಅಮ್ಮನ ನೆನಪು ಒತ್ತರಿಸಿಕೊಂಡು ಬಂದಿತು. ನಾನು ಡಿಗ್ರಿ ಮುಗಿಸಿದ ಕೂಡಲೇ ಒಳ್ಳೇ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ಅಮ್ಮನ ಜೀವಮಾನದ ಕನಸು. ನಾನು ನೋಡಲು ಸುಂದರವಾಗಿ ಇದ್ದುದರಿಂದ ಅವಳ ಕನಸಿಗೆ ಇನ್ನಷ್ಟು ರೆಕ್ಕೆಗಳು ಮೂಡಿದ್ದವು. ನಾನು ಎಂ.ಎ ಮಾಡುತ್ತೇನೆಂದು ಹಠ ಮಾಡಿದ್ದರಿಂದ ಮನಸ್ಸಿಲ್ಲದಿದ್ದರೂ ಓದಲು ಮೈಸೂರಿಗೆ ಕಳಿಸಿದಳು. ಅಲ್ಲಿ ಪರಿಚಯವಾದ ವಿನೀತ್ ಮುಂದೆ ಪ್ರೇಮಿಯಾದ. ಅವನ ಜಾತಿ ಬೇರೆಯಾದ್ದರಿಂದ ಆಮ್ಮ  ಬಿಲ್ಕುಲ್ ಒಪ್ಪಲಾರಳೆಂದು ಯಾರಿಗೂ ಸುಳಿವು ಬಿಟ್ಟುಕೊಡದೆ ಗುಟ್ಟಾಗಿ ಮದುವೆಯಾದೆ. ವಿಷಯ ಗೊತ್ತಾಗಿ ಅಮ್ಮ ಹಾಸಿಗೆ ಹಿಡಿದಳು. ಮದುವೆಯಾದಮೇಲೆಯೇ ಗೊತ್ತಾಗಿದ್ದು ವಿನೀತ್ ತೀರಾ ಮುಂಗೋಪಿ ಅಂತ!!  ನನ್ನ ಮಾತುಗಳನ್ನು ಬಲುಬೇಗನೇ ಅಪಾರ್ಥ ಮಾಡಿಕೊಳ್ತಿದ್ದ. ಹೊಸತರಲ್ಲಿ ಅವನಿಗೆ ತಿಳಿಸಿ ಹೇಳಲು ತುಂಬ ಪ್ರಯತ್ನ ಪಡುತ್ತಿದ್ದೆ. ಯಾರಾದರೂ ಹೊಸಬರು, "ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಿ?, " ಅಂತಾ ಕೇಳಿದರೆ, ನಾನಾಗ, " ನಾವು ಕನ್ನಡವನ್ನೇ ಮಾತಾಡ್ತೇವೆ. ಆದರೆ ನನ್ನ ಕನ್ನಡ ಬೇರೆ, ಅವನದು ಬೇರೆ", ಎಂದು ತಮಾಷೆಯಾಗಿ ಎನ್ನುತ್ತಿದ್ದೆ. ಅದೆಲ್ಲಾ ನೆನಪಾಗಿ ಮುಗುಳ್ನಗೆ ಮೂಡಿತು. ಹ್ಯಾಮ್ ರೀಸೀವರ್ ಗೆ ಯಾವುದೋ ಸಿಗ್ನಲ್  ಬಂದಿದ್ದರಿಂದ ಗೊರ್ ಗೊರ್ ಎಂದಿತು. ಈಗ ಯಾರು ಸಂಪರ್ಕಕ್ಕೆ ಬರಬಹುದು ಎಂದುಕೊಳ್ಳತ್ತಲೇ "ಅಲ್ಲಾ, ಎಷ್ಟು ವಿಚಿತ್ರ!!...ಪ್ರಪಂಚದ ಯಾವ ಭಾಗದವರೋ ಏನೋ...ಯಾವ ಭಾಷೆಯವರೋ ಏನೋ...ಆದರೂ ಅವರ ಜೊತೆ ಎಷ್ಟು ಚೆನ್ನಾಗಿ ಮಾತನಾಡಬಹುದು...ಎಷ್ಟು ಚೆನ್ನಾಗಿ ಪರಸ್ಪರ  ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು...ಯಾರೋ ತಿಳಿಯದ ಅಪರಿಚಿತ ವ್ಯಕ್ತಿಯ ಜೊತೆ ಅಷ್ಟು ಚೆನ್ನಾಗಿ ಸಂವಹನ ಮಾದುತ್ತೇವೆ...ನಮ್ಮ ಹತ್ತಿರವೇ ಇರುವ ಮನಸುಗಳ ಜೊತೆ ಯಾಕೆ ಹೊಂದಾಣಿಕೆ ಆಗುವುದಿಲ್ಲ?!...ಎಷ್ಟು  ವಿಚಿತ್ರ ಅಲ್ವಾ.... ವಿನೀತ್ ನ ಬಿಟ್ಟು ಬಂದ ಘಳಿಗೆಯಿನ್ನೂ  ಹಸಿಯಾಗಿ ನೆನಪಿದೆ. ಕೋತಿ, ಆದಿನ ಹೇಗೆ ನಡೆದುಕೊಂಡುಬಿಟ್ಟ. ಅವನಿಗೆ ಇಷ್ಟ ಅಂತ ಮಲ್ಲಿಗೆ ದೋಸೆ ಮಾಡಿದ್ದೆ. ನಾನು ಬಿಸಿಬಿಸಿಯಾಗಿ ದೋಸೆ ಹಾಕಿಕೊಟ್ಟರೆ ಖುಷಿಯಾಗಿ ತಿಂದ. ಆಮೇಲೆ ನಾನು ತಿನ್ನಲು ಕುಳಿತೆ. ಟಿ.ವಿ.ಯಲ್ಲಿ ನನಗಿಷ್ಟವಾದ ಕಾರ್ಯಕ್ರಮ ಬರುತ್ತಿದ್ದುದರಿಂದ ಟ.ವಿ. ಮುಂದೆ ತಿನ್ನುತ್ತಾ ಕುಳಿತೆ. ಹಂಚಿನ ಮೇಲೆ ದೋಸೆ ಹಾಕಿದ್ದರಿಂದ ಅಲ್ಲೇ ಇದ್ದ ವಿನೀತ್ ಗೆ, "ವಿನೂ, ಹಂಚಿನ ಮೇಲೆ ದೋಸೆ ಹಾಕಿದ್ದೇನೆ. ತಂದುಕೊಡೋ...", ಎಂದೆ. ನಾನು ಸಹಜವಾಗಿಯೇ ಹೇಳಿದ್ದೆ. ಆದರೆ ಅವನಿಗೆ ಏನನ್ನಿಸಿತೋ ಏನೋ...ಒಂದೇ ಬಾರಿಗೆ ರೊಚ್ಚಿಗೆದ್ದ. "ಏನೇ...ನನಗೇ ಅಡುಗೆ ಮನೆ ಕೆಲಸ ಹೇಳ್ತೀಯಾ?...ನಿನಗಿಂತ ನನ್ನ ಸಂಬಳ ಕಡಿಮೆ ಅಂತಾ ನನ್ನನ್ನು ಹಿಂಗೆ ಹಂಗಸ್ತೀಯಲ್ಲಾ...ಯೂ ಬಿಚ್", ಎಂದು ಜೋರಾಗಿ ರಿಮೋಟ್ ತೆಗೆದುಕೊಂಡು ನನ್ನ ಮುಖದ ಮೇಲೆ ಎಸೆದ. ಅದು ಸೀದಾ ನನ್ನ ಕಣ್ಣಿಗೆ ಬಿದ್ಡಿತು. ಅಮ್ಮಾ ಎಂದು ಜೋರಾಗಿ ಕೂಗಿದೆ. ಅವನು ಇನ್ನಷ್ಟು ಹೀಯಾಳಿಸತೊಡಗಿದ. ನನಗೂ ಅದೆಲ್ಲಿತ್ತೋ ಅಷ್ಟೊಂದು ಕೋಪ..."ಏ ಈಡಿಯೆಟ್..., ನೀನು ಮನುಷ್ಯನೇ ಅಲ್ಲ. ಸ್ಯಾಡಿಸ್ಟ್ ನೀನು...", ಎಂದು ಜೋರಾಗಿ ಕೂಗಾಡಿ ಮನೆಯಿಂದ ಹೊರಗೆ ಬಂದುಬಿಟ್ಟೆ. ರಾತ್ರಿ ಹತ್ತು ಗಂಟೆ. ಎಲ್ಲಿಗೆ ಹೋಗಬೇಕೆಂದು ತಿಳಿಯಲಿಲ್ಲ. ಅಮ್ಮ  ಹತ್ತಿರ ಸೇರಿಸೋಲ್ಲ ಅಂತ ಗೊತ್ತಿತ್ತು. ಆದರೆ ಬೇರೆ ವಿಧಿಯಿಲ್ಲದೆ ನೇರವಾಗಿ ಅಮ್ಮನ ಮನೆಗೇ ಹೋದೆ. ಬಾಗಿಲು ತೆಗೆದ ಅಂಕಿತ್ ಬೆರಗಾಗಿ ನಿಂತ. ಅವನನ್ನು ತಳ್ಳಿಕೊಂಡೇ ಅಮ್ಮನ ರೂಮಿಗೆ ದೌಡಾಯಿಸಿದೆ. ನನ್ನನ್ನು ನೋಡಿ ಅಮ್ಮನೂ ದಿಗ್ಬ್ರಾಂತಿಯಾದಳು. ನಾನು ಸೀದಾ ಅವಳ ಬಳಿಗೆ ಹೋಗಿ ಅವಳ ಕಾಲುಗಳನ್ನು ಹಿಡಿದುಕೊಂಡು ನಡೆದುದನ್ನೆಲ್ಲಾ ಅಳುತ್ತಲೇ ಹೇಳಿದೆ. ಅವಳು ಒಂದೂ ಮಾತನಾಡದೆ ಸುಮ್ಮನೇ ಕೇಳಿಸಿಕೊಂಡಳು. ನಾನು ಆ ಮನೆಯಲ್ಲಿರಲು ಅವಳು ಒಪ್ಪಲಾರಳೆಂದು ಭಾವಿಸಿ ದೀನಳಾಗಿ ಅವಳ ಮುಖ ನೋಡಿದೆ. ಅವಳೂ ಸಹ ನನ್ನ ಮುಖವನ್ನೇ ಕೆಲನಿಮಿಷ ದೃಷ್ಟಿಸಿ ನೋಡಿ, "ಹೋಗಲಿ ಬಿಡು. ನಾವು ಎಷ್ಟೇ ಬೆಲೆಬಾಳುವ ಚಪ್ಪಲಿಯನ್ನು ತೆಗೆದುಕೊಂಡರೂ ಹೊರಗೇ ಬಿಡುತ್ತೇವಲ್ಲಾ...ಹಾಗೆ ಎಂತಹುದೇ ಸಂಬಂಧವಾದರೂ ಅದು ಸರಿಯಿಲ್ಲ  ಎಂದರೆ ಅದು ಚಪ್ಪಲಿಗೇ ಸಮ. ಹೊರಗೆ ತಳ್ಳಿಬಿಡಬೇಕು...", ಎಂದಳು. ಅವಳ ಮಾತನ್ನು ಕೇಳಿ ನಾನು ಬೆರಗಾದೆ. ಅಮ್ಮನಿಂದ ಆ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಅನಕ್ಷರಸ್ತೆ  ಅಮ್ಮ ಅಷ್ಟು ಧೈರ್ಯವಾಗಿ ಸಮಾಧಾನ ಮಾಡಿದಾಗ ನನಗೆ ದುಃಖ ಉಮ್ಮಳಿಸಿಕೊಂಡು ಬಂದು ಅವಳನ್ನು ತಬ್ಬಿಕೊಂಡು ಜೋರಾಗಿ ಅತ್ತುಬಿಟ್ಟಿದ್ದೆ. ಮುಂದೆ ವಿನೀತ್ ನಿಂದ ಡಿವೊರ್ಸ್ ತೆಗೆದುಕೊಂಡು, ಅಮ್ಮನ ಮನೆಯಲ್ಲಿಯೇ ಇರುವಂತಾಯ್ತು. ಅದೇ ಚಿಂತೆಯಲ್ಲಿ ಅಮ್ಮ ಅಸುನೀಗಿದಳು...  

   ಮತ್ತೇ ಹ್ಯಾಮ್ ರಿಸೀವರ್ ಸದ್ದು ಮಾಡಿತು. ಯಾರೋ ವ್ಯಕ್ತಿ ದೆಹಲಿಯಿಂದ ಮಾತನಾಡುತ್ತಿದ್ದನು. ನಾನು  ನೋವಿನ ನೆನಪಿನಿಂದ ಹೊರಬಂದು ಉತ್ಸಾಹದಿಂದ ಮಾತನಾಡತೊಡಗಿದೆ. ಸ್ವಲ್ಪಹೊತ್ತು ಮಾತನಾಡಿದ ಮೇಲೆ ಮನಸ್ಸು ಹಗುರವಾಯ್ತು. ಯಾರೋ ಏನೋ...ಕೇವಲ ಹವ್ಯಾಸಿ ಹ್ಯಾಮ್ ಎಂದು ಮಾತ್ರ ಗೊತ್ತು. ರೇಡಿಯೋ ತರಂಗಗಳ ಮೂಲಕ ಹಾದು ಬರುವ ಆ ದ್ವನಿಗಳ  ಜೊತೆ ಎಷ್ಟು ಆತ್ಮೀಯವಾಗಿ ಮಾತನಾಡಬಹುದು. ಅದೇ ಮನಸ್ಸು ಸರಿಯಿಲ್ಲದವರ ಜೊತೆ ಎಷ್ಟು ಹತ್ತಿರವಿದ್ದರೂ ಆತ್ಮೀಯವಾಗಿ ಮಾತನಾಡಲಾಗುವುದಿಲ್ಲ. ಮಾತುಗಳಲ್ಲಿ ಅದೆಷ್ಟು ಅಪಾರ್ಥಗಳು ಕಾಣುತ್ತವೆ. ಎಂಥ ವಿಪರ್ಯಾಸ...ಸಂವಹನ ಹತ್ತಿರವಿದ್ದಾಗಲೇ ಸರಿಯಾಗಿರುವುದಿಲ್ಲವೇನೋ...ತೀರಾ ಸಮೀಪದಲ್ಲಿದ್ದಾಗಲೇ ಹೃದಯದ ಸಿಗ್ನಲ್  ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲವೇನೋ... ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ... ದೇವಾನು ದೇವತೆಗಳಿಗೂ ಸಂವಹನ ಸರಿಯಾಗಿ ಆಗಿಲ್ಲದೆ ಎಷ್ಟೋ ಸಂದರ್ಭಗಳು ಜರುಗಿವೆ...ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧ ನಡೆಯಲು ಸಹ ಸಂವಹನ ಸರಿಯಾಗಿ ಆಗದ ಕಾರಣ...ದ್ರೌಪದಿಯನ್ನು ಸ್ವಯಂವರದಲ್ಲಿ  ಅರ್ಜುನ ಗೆದ್ದುಕೊಂಡು ಮನೆಗೆ ಬಂದವನು ಬಾಗಿಲಲ್ಲಿ ನಿಂತು, ಒಳಗಿದ್ದ ಕುಂತಿಗೆ, "ಅಮ್ಮಾ, ಹೆಣ್ಣನ್ನು ಗೆದ್ದುಕೊಂಡು ಬಂದೆ" , ಅನ್ನುತ್ತಾನಂತೆ. ಅದನ್ನು ಸರಿಯಾಗಿ ಕೇಳಿಸಿಕೊಳ್ಳದ ಕುಂತಿ, ಹೆಣ್ಣು ಎಂಬ ಪದವನ್ನು ಹಣ್ಣು ಎಂದು ಭಾವಿಸಿ , "ಐವರೂ ಸಮನಾಗಿ ಹಂಚಿಕೊಳ್ಲಿ" ಎಂದಳಂತೆ. ಆಗ ದ್ರೌಪದಿ ಪಾಂಚಾಲಿ ಆದಳು... ಮುಂದೆ ಕುರುಕ್ಷೇತ್ರ ಯುದ್ದಕ್ಕೆ ಕಾರಣವೂ ಆದಳು !!!...ಅಂದರೆ ಹತ್ತಿರವಿದ್ದಾ ಗಲೇ ಸಂವಹನ ಸರಿಯಾಗಿ ಆಗದೆ ಅಪಾರ್ಥಗಳು ನಡೆಯುತ್ತವೆಯೋ ಏನೋ...ದೂರದ ದನಿಗೇ ಹೃದಯದ ಸಿಗ್ನಲ್ ಸ್ಪಂಧಿಸುವುದೊ ಏನೋ...ದೃಶ್ಯಕ್ಕಿಂತಲೂ ಶ್ರವಣ ಆಪ್ತವಾಗುವುದು ಇದೇ ಕಾರಣಕ್ಕೆ ಇರಬಹುದು....ನನ್ನ ಲಾಜಿಕ್ ಗೆ ನಾನೇ ನಗತೊಡಗಿದೆ. ಅದೇ ಸಮಯಕ್ಕೆ ಟಿ.ವಿ.ಯಲ್ಲಿ "ಈ ಸಂಭಾಷಣೇ...ನಮ್ಮ ಈ ಪ್ರೇಮ ಸಂಭಾಷಣೇ...ಅತಿ ನವ್ಯ...",ಎಂಬ ಹಾಡು ಮೂಡಿಬಂದದ್ದನ್ನು ಕೇಳಿ ಇನ್ನಷ್ಟು ಜೋರಾಗಿ ನಗು ಬಂದಿತು. ನಾನು ನಗುವ ಸದ್ದು ಕೇಳಿ ಪುಟ್ಟ ಸ್ವಾನಿ ಓದಿಬಂದು, "ಅತ್ತೇ, ಯಾಕೆ ನಗ್ತಾ ಇದ್ದೀರ...ನಂಗೂ ಹೇಳಿ", ಎಂದಳು. "ಏನೋ ನೆನಪಾಯ್ತು ಕಂದಾ...ಅದಕ್ಕೇ ನಕ್ಕೆ ಅಷ್ಟೇ...ಅದಿರಲಿ, ನಿನ್ನ   ಹೋಮ್ ವರ್ಕ್ ಆಯ್ತಾ...", ಎಂದೆ. "ಇಲ್ಲಾ ಅತ್ತೇ...ಇನ್ನೂ ತುಂಬಾ ಇದೆ", ಎಂದಳು ತುಟಿಯನ್ನು ಉದ್ದ ಮಾಡಿ. "ಹೌದಾ ಕಂದ, ಹಾಗಾದರೆ ಎಲ್ಲಾ ಬರಿ. ನಿನ್ನನ್ನು ಲಾಂಗ್ ಢ್ರೈವ್ ಕರೆದುಕೊಂಡು ಹೋಗಿ ಐಸ್ ಕ್ರೀಂ ಕೊಡಿಸುತ್ತೇನೆ ", ಎಂದೆ. ಅವಳು ಖುಷಿಯಿಂದ ತಲೆಯಾಡಿಸಿ, ಓಡಿಹೋಗಿ ಒಂದೇ ನಿಮಿಷಕ್ಕೆ ವಾಪಸ್ಸು ಬಂದು, "ಆಯ್ತು ಅತ್ತೇ...ಬನ್ನಿ ಹೋಗೋಣ", ಎಂದಳು. "ಅರೆರೆ, ಇಷ್ಟು ಬೇಗ  ಆಯ್ತಾ?!!!", ನಾನು ಅಚ್ಚರಿಯಿಂದ ಕೇಳಿದೆ. "ಓ...", ಎಂದು ಪುಸ್ತಕವನ್ನು ತೋರಿಸಿದಳು. ಅಲ್ಲಿ "ಎಲ್ಲಾ" ಎಂದು ಮಾತ್ರ ಬರೆದಿದ್ದಳು. ನಾನು ಕಣ್ಣರಳಿಸಿ ನೋಡಿದಾಗ, ಅವಳು ,"ನೀವೇ ತಾನೇ "ಎಲ್ಲಾ" ಬರಿ ಅಂತಾ ಹೇಳಿದ್ದು. ಅದಕ್ಕೇ ಬರೆದೆ...", ಎಂದಳು, ಕಣ್ಣುಹೊಡೆದು. ನಾನು ನಗು ತಡೆಯಲಾರದೆ, "ಹೌದೌದು ಬಿಡು...ಪದಗಳಿಗೆ ನಾನಾ ಅರ್ಥಗಳಿವೆ...ಅವರವರ ಭಾವಕ್ಕೆ ಆ ಆ ಅರ್ಥಗಳನ್ನು ಕೊಡುತ್ತವೆ...", ಎಂದು ಅವಳನ್ನು  ನನ್ನ ಬೆನ್ನ ಮೇಲೆ ಕೂಸುಮರಿ ಮಾಡಿ ಎತ್ತಿಕೊಂಡು ಕಾರ್ ನೆಡೆಗೆ ನಡೆಯುತ್ತ , " ಈ ಶ್ಲೋಕವನ್ನು ಹೇಳು ಮರಿ... ವಾಗರ್ಥವಿವ  ಸಂಪೃಕ್ತೌ  ವಾಗರ್ಥ ಪ್ರತಿ ಪತ್ಯಯೆ, ಜಗತಃ  ಪಿತರೌ ವಂದೇ ಪಾರ್ವತಿ ಪರಮೇಶ್ವರಹ..." ಎಂದು ಹೇಳಿಕೊಡತೊಡಗಿದೆ. ಸ್ವಾನಿ ತೊದಲು ಮಾತಿನಲ್ಲಿ ಮುದ್ದಾಗಿ ಹೇಳತೊಡಗಿದಳು....ಅದನ್ನು ಕೇಳುತ್ತಾ ಹೊರಗಿನ ತಂಗಾಳಿಗೆ ಮುಖ ವೊಡ್ಡಿದಾಗ ಮನಸ್ಸು ಯಾಕೋ ಉಲ್ಲಾಸಗೊಂಡಿತು...

- ಕಿರಣ್ ಪ್ರಸಾದ್ ರಾಜನಹಳ್ಳಿ

From,
Mrs. Kiran Prasad Rajanahally
#247, "Elegant grandeur"
Flat number-401
Jayanagar 7th block
(Opp to Jayanagar National College Play ground)
Bangalore-560070
Phone:9449459766


No comments: